ಹೈದರಾಬಾದ್: ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಪಿರಮಿಡ್ ಧ್ಯಾನಪೀಠ ಹೊಂದಿರುವ ಸುಭಾಷ್ ಪತ್ರಿ ಸ್ವಾಮೀಜಿ, ಇದೀಗ ಮಹಿಳೆಯರ ಜತೆ ಅಸಭ್ಯ ವರ್ತನೆ ಮತ್ತು ಭೂಮಿ ಅತಿಕ್ರಮಣದ ಆರೋಪಕ್ಕೆ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪದ ಕುರಿತು ತನಿಖೆ ನಡೆಸುವಂತೆ ಮೆಹಬೂಬ್ನಗರ ಜಿಲ್ಲಾಧಿಕಾರಿ ಮತ್ತು ಆಂಧ್ರಪ್ರದೇಶ ಮಾನವ ಹಕ್ಕುಗಳು ಆಯೋಗ ಪ್ರತ್ಯೇಕವಾಗಿ ಆದೇಶ ಹೊರಡಿಸಿವೆ.
ಸುಭಾಷ್ ಪತ್ರೀಜಿ 'ಪಿರಮಿಡ್ ಸ್ಪಿರಿಚುವಲ್ ಸೊಸೈಟಿ ಆಫ್ ಇಂಡಿಯಾ' ಎಂಬ ಸಂಸ್ಥೆಯ ಮೂಲಕ ದೇಶದ ಹಲವು ನಗರಗಳಲ್ಲಿ ಧ್ಯಾನಪೀಠಗಳನ್ನು ಸ್ಥಾಪಿಸಿದ್ದಾರೆ. ಇಂತಹ ಒಂದು ಪೀಠ ಬೆಂಗಳೂರಿನ ಹೊರವಲಯದಲ್ಲೂ ಇದೆ. ಇದೇ ರೀತಿ ಆಂಧ್ರಪ್ರದೇಶದ ಮೆಹಬೂಬ್ನಗರ ಸಮೀಪದ ಕಡ್ತಾಲ್ ಎಂಬಲ್ಲಿಯೂ ಪತ್ರಿ, ಧ್ಯಾನಪೀಠವೊಂದನ್ನು ಸ್ಥಾಪಿಸಿದ್ದಾರೆ. ಮಹಾ ಪಿರಮಿಡ್ ಎಂಬ ಈ ಧ್ಯಾನಪೀಠ ಸ್ಥಾಪನೆಗಾಗಿ ಪತ್ರಿ ಸರ್ಕಾರಿ ಜಾಗವನ್ನು ಅತಿಕ್ರಮಿಸಿದ್ದಾರೆ ಎಂದು ವಕೀಲ ಸೋಮರಾಜು ಎಂಬುವರು ದೂರು ನೀಡಿದ್ದಾರೆ.
ಇದರ ಜೊತೆಗೆ ಈ ಮಹಾ ಪಿರಮಿಡ್ನಲ್ಲಿ ಇತ್ತೀಚಿಗೆ 'ಪ್ರಪಂಚ ಧ್ಯಾನ ಮಹಾಸಭೆ' ಎಂಬ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ಭಾಗಿಯಾಗಿದ್ದ ಕೆಲ ಮಹಿಳೆಯರನ್ನು ಅಪ್ಪಿಕೊಂಡು ಸುಭಾಷ್ ಪತ್ರೀಜಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಲಾಗಿದೆ.
ದೂರನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರಪ್ರದೇಶ ಮಾನವ ಹಕ್ಕು ಆಯೋಗ, ಲೈಂಗಿಕ ಕಿರುಕುಳ ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಮೆಹಬೂಬ್ ನಗರ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷರಿಗೆ ಸೂಚಿಸಿದೆ.
